ಸೂರ್ಯಕೀರ್ತಿ (ಆಂಗ್ಲ: ) ಅಥವಾ ಸ್ನೇಕ್ ಸೂರ್ಯಕೀರ್ತಿ, ಮೈಸೂರು ಮೂಲದ ಒಬ್ಬ ಉರಗ ತಜ್ಞ ಮತ್ತು ಪರಿಸರ ಸಂರಕ್ಷಣಾವಾದಿ. ಖ್ಯಾತ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರ ಮಗನಾದ ಕೀರ್ತಿ, ಮೈಸೂರು ಜಿಲ್ಲೆಯಲ್ಲಿ ಈವರೆಗೂ ಸಂರಕ್ಷಣೆ ಮಾಡಿರುವ ಹಾವುಗಳ ಸಂಖ್ಯೆ ಕೆಲವು ಸಾವಿರಗಳು. ಹಾವುಗಳು ಮಾತ್ರವಲ್ಲದೆ, ಗೂಬೆಮರಿಗಳು, ಅಳಿಲುಗಳು, ನಾಯಿಮರಿಗಳು, ರಸ್ತೆ ಅಪಘಾತದಲ್ಲಿ ಅಂಗವಿಕಲಗೊಂಡ ಇತರ ಪ್ರಾಣಿಗಳ ಸಂರಕ್ಷಣೆಗಾಗಿಯೇ ಹಗಲಿರುಳು ಶ್ರಮಿಸುವ ಇವರು ಹಾವುಗಳ ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ನಾಡಿನಾದ್ಯಂತ ಕೈಗೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ನೂರಾರು ಮನೆಗಳಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೇ ಹಾವುಗಳನ್ನು ರಕ್ಷಿಸಿ, ಸುರಕ್ಷಿತ ಸ್ಥಳದಲ್ಲಿ ಅವುಗಳನ್ನು ಬಿಡುತ್ತಾ ತಮ್ಮ ಪರಿಸರ ರಕ್ಷಣಾಕಾರ್ಯ ನಡೆಸುತ್ತಿದ್ದಾರೆ ಸೂರ್ಯಕೀರ್ತಿ. == ಪ್ರಾರಂಭಿಕ ಜೀವನ == ಸ್ನೇಕ್ ಶ್ಯಾಮ್ ಮಗನಾಗಿ ಮೈಸೂರಿನಲ್ಲಿ ಹುಟ್ಟಿದ ಕೀರ್ತಿ ಓದಿದ್ದು ಪದವಿ ಹಂತದವರೆಗೆ. == ಉರಗತಜ್ಞರಾಗಿ == ಚಿಕ್ಕವಯಸ್ಸಿನಲ್ಲಿಯೇ ಹಾವುಗಳ ಬಗೆಗೆ ಕುತೂಹಲ ಬೆಳೆಸಿಕೊಂಡ ಸೂರ್ಯ, ತಂದೆಯ ಜೊತೆ ಹಾವುಗಳ ರಕ್ಷಣಾಕಾರ್ಯ ನಡೆಯುವಲ್ಲಿಗೆ ಹೋಗಿ ಗಮನಿಸುತ್ತಿದ್ದರು. ತಂದೆಯನ್ನೇ ಗುರುವಾಗಿಸಿಕೊಂಡ ಅವರು, ವಿಷಕಾರಿ ಮತ್ತು ವಿಷಕಾರಿಯಲ್ಲದ ಹಾವುಗಳನ್ನು ನೋಡಿದ ಕೂಡಲೇ ಗುರುತಿಸುವ ವಿದ್ಯೆ ಕಲಿತರು. ಮೈಸೂರು ಭಾಗದ ಸರಿಸುಮಾರು ಎಲ್ಲಾ ಬಗೆಯ ಹಾವುಗಳನ್ನು ಅವುಗಳ ಆವಾಸಸ್ಥಾನಗಳ ಮೂಲದಲ್ಲೇ ಹೋಗಿ ಅಧ್ಯಯನ ನಡೆಸುತ್ತಾ ಕಲಿತ ಸೂರ್ಯ ಅವರು ಪರಿಸರ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡರು. ಪ್ರಾಣಿಗಳ ಅಕ್ರಮ ಮಾರಾಟ ಮತ್ತು ಚರ್ಮಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ಕಾಳದಂಧೆಯ ವಿರುದ್ಧವೂ ಜನಜಾಗೃತಿ ಮೂಡಿಸುತ್ತಿರುವ ಸೂರ್ಯ, ದೇಶದ ಅತಿಕಿರಿಯ ಉರಗತಜ್ಞರಲ್ಲಿ ಒಬ್ಬರೆನಿಸಿದ್ದಾರೆ. === ಹಾವಿನ ಮೊಟ್ಟೆಗಳ ರಕ್ಷಣೆ === ಹಾವುಗಳ ರಕ್ಷಣೆ ಮಾತ್ರವೇ ಅಲ್ಲದೇ, ಹಾವುಗಳ ಮೊಟ್ಟೆಗಳನ್ನೂ ರಕ್ಷಿಸುವ ಕೆಲಸ ಮಾಡುತ್ತಾರೆ ಸೂರ್ಯಕೀರ್ತಿ. ಕೃತಕ ಕಾವು ನೀಡಿ, ಹೊರಬಂದ ಮರಿಗಳಿಗೆ ಸೂಕ್ತ ಹಾರೈಕೆ ಮಾಡಿ, ಸೂಕ್ತ ಹಂತದಲ್ಲಿ ಸುರಕ್ಷಿತ ಜಾಗಗಳಿಗೆ ಹಾವುಗಳನ್ನು ಬಿಡುವ ಅವರು, ಕೃತಕ ಕಾವು ನೀಡಿ ಹಾರೈಕೆ ಮಾಡಲು ತಮ್ಮ ಮನೆಯಲ್ಲೇ ಜಾಗ ಮಾಡಿಕೊಂಡಿದ್ದಾರೆ. == ಉಲ್ಲೇಖಗಳು ==